ಕತೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕತೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಫೆಬ್ರವರಿ 25, 2012

ಮನಸ್ಥಿತಿ

"ಸೂಪರ್" , "ಬ್ಯೂಟಿಫುಲ್ " , "ವೆರಿ ನೈಸ್ " ...  
ಫೇಸ್ ಬುಕ್ ನಲ್ಲಿದ್ದ  ರೂಪಳ ಒಂದೊಂದೇ ಫೋಟೋಕ್ಕೆ ಕಾಮೆಂಟ್ ಹೊಡೆಯುದರಲ್ಲಿ ಮಗ್ನನಾಗಿದ್ದೆ .
"ಹಲೋ ಮಿಸ್ಟರ್.ಸುರೇಶ್", ಜೋರಾದ ಧ್ವನಿ ಕೇಳಿ ತಿರುಗಿ ನೋಡಿದೆ.
ಮುಖ ಗಂಟಿಕ್ಕಿಕೊಂಡಿತು. "ಎಷ್ಟು ಹೊತ್ತಿಂದ ನನ್ನ PCನ ನೋಡುತಿದ್ದ ನೋ ಭಡವಾ " ಅಂದುಕೊಂಡು ,
"ಹೇಳಿ ಸಾರ್ " ಎಂದೆ.
"ಸಂಜೆ ನಿನ್ನ ಅಪ್ರೈಸಲ್ ಇದೆ ರೆಡಿಯಾಗಿರು " ಬೆನ್ನು ತಟ್ಟಿ, "ಕಾದಿದೆ ನಿನಗೆ "ಎಂಬಂತೆ ಒಂದು ವ್ಯಂಗ್ಯ ನಗುವನ್ನೂ ಬೀರಿ ಹೊರಟು ಹೋದ ಮ್ಯಾನೇಜರ್ ಸುಮನ್ .
          
ತುಂಬಾ ಕಷ್ಟಪಟ್ಟು ಓದಿ ಸಾಫ್ಟ್ ವೇರ್ ಸೇರಿಕೊಂಡಿದ್ದೆ . ಓದಿನ ದಿನಗಳಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದೆ .
ಅದೇನೋ ಸಾಧಿಸಬೇಕು , ಎಲ್ಲರಿಗಿಂತ ಬಿನ್ನವಾಗಿ ಬೆಳೆಯಬೇಕು ಎಂಬೆಲ್ಲ ಕನಸನ್ನು ಕಟ್ಟಿದ್ದೆ .
ಕನಸು ಕಟ್ಟಲೇನು ,ಮೌಂಟ್ ಎವೆರೆಸ್ಟ್ ಹತ್ತಬೇಕೇ ? ಜೀವನವೆಂಬ ಬೆಟ್ಟ ಹತ್ತಿರ ಬಂದಾಗ 'ಮೌಂಟ್ ಎವೆರೆಸ್ಟ್ ' ಬಿಡಿ , ಊರ ಗುಡ್ಡವನ್ನು ಹತ್ತುವ ಸಾಮರ್ಥ್ಯವೂ  ಕಳೆದು ಹೋಗಿರುತ್ತದೆ .
"ಇಷ್ಟು ದಿನ ಓದಿಸಿದೆ , ಇನ್ನಾವುದಾದರೂ ಕೆಲಸಕ್ಕೆ ಸೇರು " ಎಂಬ ತಂದೆಯ ಮಾತಿಗೆ ಮನ್ನಣೆ ಕೊಡದಿದ್ದರೆ ತಪ್ಪೆನಿಸಿತು. ಊರಿಂದ ಸಿಟಿಗೆ ಬಂದೆ . ಸುಲಭವಾಗಿ ಸಿಗುವ ಸಾಫ್ಟ್ ವೇರ್  ಉದ್ಯೋಗ ಕೈಬೀಸಿ ಕರೆಯಿತು... ಸೇರಿಕೊಂಡೆ .
ಕೆಲವು ವರ್ಷಗಳು ಕಳೆಯಿತು . ಅದೇ ಕೆಲಸ .. ಅದೇ PC .. ಅದೇ ಕ್ಯೂಬಿಕಲ್ ...
ಕೀ ಬೋರ್ಡ್ , ಮೌಸ್,  ಮಾನಿಟರ್ ಗಳಿಗೇ ಬೋರಾಗುವಷ್ಟು ಕೆಲಸ ಮಾಡುತಿದ್ದೆ .
ಆದರೆ ಕಂಪ್ಯೂಟರ್  ನಂತೆ  ನಾನು ಇದ್ದಲ್ಲೇ ಇದ್ದೆ . ಸ್ವಂತ ಬುದ್ದಿಯಿಲ್ಲದವನಂತೆ ಕ್ಲೈಂಟ್ ಹೇಳಿದ್ದನ್ನೆಲ್ಲಾ ಮಾಡಿ ಮಾಡಿ ಕೊಡುತ್ತಿದ್ದೆ .
ಇದೇ   ಕಂಪ್ಯೂಟರ್ ನ ಮುಂದೆ ಕೂತು ಎಷ್ಟೋ ರಿಲೀಸ್ ಮಾಡಿದ್ದೆ .
ಆದರೆ ಹೊಟ್ಟೆಯೊಂದು ಬಿಟ್ಟು ಬೇರಿನ್ನೇನೂ  ಬೆಳೆಯುತ್ತಿಲ್ಲ ಎನಿಸತೊಡಗಿತು .
ಹಾಗೆ  ನನ್ನ ಆಕಾಂಕ್ಷೆಗಳನ್ನು ನಾನೇ ಸಾಯಿಸಿಕೊಂಡೆ.
ಸಣ್ಣ ಕ್ಯೂಬಿಕಲ್ ಒಂದಕ್ಕೆ ನನ್ನ ದಿನದ ಮುಕ್ಕಾಲು ಭಾಗವನ್ನೂ ಮೀಸಲಾಗಿರಿಸಿ, ಯಾವುದಕ್ಕೂ 'ಗೂಗಲ್' ಗೆ ಶರಣಾಗಿ, ತಲೆಎಂಬುದನ್ನು "ಪೆನ್ ಡ್ರೈವ್ "ನಂತೆ ಟೆಂಪರರಿ ಸ್ಟೋರೇಜ್ ಏರಿಯ ವನ್ನಾಗಿ ಮಾಡಿಕೊಂಡೆ .
ಅದೇಕೋ ಇತ್ತೀಚಿಗೆ ಮ್ಯಾನೇಜರ್ ಗಳಿಗೆ ನನ್ನ ಕೆಲಸ ಹಿಡಿಸುತ್ತಿಲ್ಲ. ಪ್ರೋಡಕ್ಟಿವಿಟಿ ಇಲ್ಲ ,ಇಂಟರ್ನೆಟ್ ನಲ್ಲಿ ಟೈಂಪಾಸ್ ಮಾಡುತಿದ್ದೇನೆಂಬ ಕಂಪ್ಲೈಂಟ್ ಬೇರೆ .

" ಥ್ಯಾಂಕ್ಯೂ ಡಿಯರ್ ", ರೂಪಳ ಕೃತಜ್ಞತಾ ಕಾಮೆಂಟ್, ಫೇಸ್ ಬುಕ್ ನಲ್ಲಿ ಕಾಣಿಸಿತು.
"ಓ ಹುಡುಗಿ ಆನ್ಲೈನ್ ಇದ್ದಾಳೆ "ಎಂದು ಮನಸ್ಸಿಗೇನೋ ಸಂತಸವಾಯಿತು.
" ಹಾಯ್ ರೂಪ , ಆನ್ಲೈನ್ ಇದ್ದಿಯಾ  ?"
"ಹೌದು ಕಣೊ ...ನನ್ನ ಗೂಬೆ ಮ್ಯಾನೇಜರ್ ಅದೇನೋ ಕೆಲಸ ಕೊಟ್ಟಿದ್ದಾನೆ. ಇಂಟರ್ನೆಟ್ ನಲ್ಲಿ ಕೋಡ್ ಹುಡುಕುತ್ತಾ ಇದ್ದೀನಿ "
"ಹೌದಾ ಏನು ಹೇಳು "
"ಅದೇನೋ ತುಂಬಾ ಕಷ್ಟವಾಗಿದೆ . ಏನೆಂದೇ    ಗೊತ್ತಾಗುತಿಲ್ಲ "
"ಹೌದಾ, ನನಗೆ ಮೇಲ್  ಮಾಡು, ಚಿಂತೆ ಬಿಡು "
"ಓಹ್ ತುಂಬಾ ಥ್ಯಾಂಕ್ಸ್ ಡಿಯರ್  "
"ಇಟ್ಸ್ ಓಕೆ ಡಿಯರ್"
"ಸರಿ ಪ್ರಾಬ್ಲಮ್ ಕಳಿಸಿರುತ್ತೇನೆ ...ಇವತ್ತು ಸಂಜೇನೇ ಕೋಡ್ ಬೇಕು "
"ಓಕೆ , ಖಂಡಿತ  "
"ಬೈ... ಬೈ..."
"ಬೈ... ಬೈ ..."
                    
ಈ  ರೂಪ ಚಾಟಿಂಗ್ ಸಿಕ್ಕಾಗ ಅದೇನೋ ಸಂತಸ.
ಸಮಯ ಸರಿದಿದ್ದೇ ಗೊತ್ತಾಗಲ್ಲ .
ಅವಳು ಚಾಟಿಂಗ್ ಸಿಗುತ್ತಾಳೆ ಎಂಬ ಒಂದೇ ಕಾರಣಕ್ಕೆ ನನಗೆ PC ಮೇಲೆ ಪ್ರೀತಿ.
ಅವಳ ಕೆಲಸ ಎಷ್ಟೇ ಕಷ್ಟವಾಗಿದ್ದರೂ ಎಲ್ಲಾ ಹುಡುಗರಂತೆ ಕಷ್ಟ ಪಟ್ಟಾದರೂ ಮಾಡಿ ಕೊಡುತ್ತೀನಿ.
ಕಳೆದು ಹೋದ ಬುದ್ದಿವಂತಿಕೆ ಆಗ ಇದ್ದಕಿದ್ದಂತೆ ಬಂದು ಬಿಡುತ್ತದೆ.

"ಅಪ್ರೈಸಲ್ ಮೀಟಿಂಗ್ " ರಿಮೈಂಡರ್  ಸ್ಕ್ರೀನ್ ಮೇಲೆ ಬಂತು.
"ಸರಿ ಇನ್ನೊಂದು ಗಂಟೆ ಕೋರೆಯಿಸಿಕೊಳ್ಳಬೇಕು", ಎಂದುಕೊಳ್ಳುತ್ತ ಮೀಟಿಂಗ್ ರೂಂನ ಕಡೆ ನಡೆದೆ .

"ಬನ್ನಿ ಮಿಸ್ಟರ್. ಸುರೇಶ್ ,ಹೇಗಿದ್ದೀರಾ ?" ಕ್ರತಕ ನಗೆ ಬೀರಿ ಸ್ವಾಗತಿಸುವಂತೆ ಮಾಡಿದ ಮ್ಯಾನೇಜರ್ ಸುಮನ್. 
"ಹುಂ ....ಪರವಾಗಿಲ್ಲ " ಎಂದೆ.
"ಮತ್ತೆ ಹೇಳಿ ,ಏನೆಲ್ಲಾ ಮಾಡಿದ್ದೀರಾ ಈ ವರ್ಷ",  ಏನನ್ನೂ ಮಾಡಿಲ್ಲ ನೀನು ಎಂಬಂತೆ ದೃಷ್ಟಿ ಬೀರಿ ಪ್ರಶ್ನಿಸಿದ .
"ಏನೋ ಆದಷ್ಟು ಮಾಡಿದ್ದೀನಿ .ಕಂಪನಿಗೆ ನನ್ನಿಂದ ತುಂಬಾ ಹೆಲ್ಪ್ ಆಗಿದೆ ಅಂದುಕೊಂಡಿದ್ದೀನಿ "
".... " ನನ್ನ ಮಾತನ್ನು ನಂಬಲಾರದವನಂತೆ ಧೃಷ್ಟಿ ಬೀರಿದ .
" ಹೇಗೆ ಹೆಲ್ಪ್ ಆಗಿದೆ ಅಂತಿರಾ ...", ಮತ್ತೆ ವ್ಯಂಗ್ಯವಾಗೇ ಪ್ರಶ್ನಿಸಿದ .
"ಟಾರ್ಗೆಟ್ ಮೀಟ್ ಮಾಡೋಕೆ ಟ್ರೈ ಮಾಡಿದ್ದೀನಿ  ...."ನನ್ನ ಮಾತನ್ನು ಕತ್ತರಿಸಿ ,
"ಟಾರ್ಗೆಟ್ ಮೀಟ್ ಮಾಡಿದ್ದೀರಾ...ಯಾವಾಗ ? ಎಲ್ಲಾ ಕೆಲಸನೂ ನಿಧಾನವಾಗೆ ಮಾಡುತ್ತೀರಲ್ಲಾ''
ಏನು ಕೆಲಸ, ಹೇಗೆ ಮಾಡೋದು, ಎಷ್ಟು ದಿನ ಬೇಕು, ಏನೂ ಗೊತ್ತಿರೋಲ್ಲ ಈತನಿಗೆ. ಸುಮ್ಮನೆ ಕ್ಲೈಂಟ್ ಹೇಳಿದ ದಿನಕ್ಕೆ ಒಪ್ಪಿಕೊಂಡು , ಅದನ್ನೇ ಟಾರ್ಗೆಟ್ ಅನ್ನುತ್ತಾನೆ .ಹೇಗೆ ಮುಗಿಸೋಕೆ ಆಗುತ್ತೆ ಅಂದುಕೊಂಡೆ .
"ನನ್ನ  ಕಾಂಪಿಟೆನ್ಸಿ ಗೆ ಅಷ್ಟು ದಿನ ಬೇಕಾಗುತ್ತೆ "ಅಂದೆ .
"ಎಷ್ಟು ವರ್ಷದಿಂದ ಇದ್ದಿರಾ ...ಇನ್ನೂ  ಕಾಂಪಿಟೆನ್ಸಿ ಡೆವಲಪ್ಪ್ ಮಾಡಿಲ್ಲವಾ "
ಈತ ಭಾರಿ ಮಾಡಿದ್ದಾನಾ,  ಎನಿಸಿತು.  "ಏನೋ ಪರವಾಗಿಲ್ಲ ಅನ್ನುವಷ್ಟು  ಕಾಂಪಿಟೆನ್ಸಿ ಇದೆ .ಆದರೆ ಕ್ಲೈಂಟ್ ಕೊಡೊ ಕೆಲಸಕ್ಕೆ ಅಷ್ಟು ದಿನ ಬೇಕಾಗುತ್ತದೆ "ಅಂದೆ.
"ಅದೇನು ಕ್ಲೈಂಟ್ ಸುಮ್ಮಗೆ ಡೇಟ್ ಹೇಳ್ತಾರಾ...  ಕಾಂಪ್ಲೆಕ್ಸ್ಸಿಟಿ ನೋಡ್ಕೊಂಡೇ ಹೇಳ್ತಾರೆ. ನಿಮಗೆ ಹುಡುಗೀರು ಫೇಸ್ ಬುಕ್ ನಲ್ಲಿ ಹಾಕುವ ನಾಯಿ, ಬೆಕ್ಕುಗಳಿಗೆ ಕಾಮೆಂಟ್ ಹಾಕೊದರಲ್ಲೇ ಸಮಯ ಕಳೆದು ಹೋಗುತ್ತದೆ. ಇನ್ನು ಕೆಲಸ ಯಾವಾಗ ಮಾಡ್ತಿರಾ? "
ಮುಖಕ್ಕೆ ಬಾರಿಸೋಣ ಅನ್ನುವಷ್ಟು ಕೋಪ ಬಂತು.
"ಹಾಗೇನೂ ಇಲ್ಲ. ರಾತ್ರಿ-ಹಗಲು ಕೆಲಸ ಮಾಡ್ತೀನಿ. ಸ್ವಲ್ಪ ಹೊತ್ತು  ರಿಲ್ಯಾಕ್ಸ್ ಗಾಗಿ ಫೇಸ್ ಬುಕ್ ನೋಡ್ತೀನಿ ಅಷ್ಟೇ"
"ರಾತ್ರಿ ಏನು ಕೆಲಸ ಮಾಡ್ತಿರಾ, ಯಾರಿಗೆ ಗೊತ್ತು...", ಅಂದ.
ಹೌದು  ಇವ್ನು ಅಲ್ಲಿ ಮನೇಲಿ ಇರ್ತಾನೆ , ಇವನಿಗೇನು ಗೊತ್ತು ನಾವು ರಾತ್ರಿ ಕೆಲಸ ಮಾಡ್ತೀವಾ ಇಲ್ಲವಾ ಅಂತ ಅಂದುಕೊಂಡೆ
"ಸರಿ, ಈ ವರ್ಷ ಏನು ನಾಲೇಜ್ ಶೇರ್ ಮಾಡಿದ್ದಿರಾ..."
"ಪ್ರತೀ ವರ್ಷ ಶೇರ್ ಮಾಡೋಕೆ ಏನಿರುತ್ತದೆ... " ಅಂದೆ.
"ಏನೋ ಗೊತ್ತಿದ್ದರೆ ಶೇರ್ ಮಾಡಬಹುದು", ಅಂದ ವ್ಯಂಗವಾಗಿ.
" ... "
"ನಿಮ್ಮ ಪೀರ್ ಫೀಡ್ ಬ್ಯಾಕ್  ಚೆನ್ನಾಗಿಲ್ಲ... ಸರಿಯಾಗಿ ಕೋ-ಆಪರೇಟ್ ಮಾಡೋಲ್ಲ. ಇಷ್ಟು ವರ್ಷ  ಎಕ್ಸ್ ಪೀರಿಯೆನ್ಸ್ ಆದ್ರೂ ಇನ್ನೂ ಚಿಕ್ಕ ಪುಟ್ಟ ತಪ್ಪು ಮಾಡ್ತಾನೆ ಇರ್ತಿರಾ... "
ದೊಡ್ಡ ದೊಡ್ಡ ತಪ್ಪು ಮಾಡ್ತಿಲ್ಲವಲ್ಲ... ನಿಮ್ಮ ತರ ಯಾವಯಾವುದೋ ಟಾರ್ಗೆಟ್ಗೆ ಒಪ್ಪಿಕೊಂಡು ಅನ್ನಿಸಿತು. ಮೌನವಾಗಿದ್ದೆ.
"ಇನ್ನೇನಾದರೂ ಹೇಳೋದಕ್ಕಿದೆಯಾ", ಅಂದ.
"ತುಂಬಾ ವರ್ಷದಿಂದ ಇಲ್ಲೇ ಇದ್ದೀನಿ. ಪ್ರಮೋಶನ್ ಯಾವಾಗ" , ಅಂದೆ ನಿರ್ವಿಕಾರವಾಗಿ.
"ಈ ವರ್ಷ ಯಾರಿಗೂ ಪ್ರಮೋಶನ್ ಕೊಡ್ತಾ ಇಲ್ಲ. ಚೆನ್ನಾಗಿ ಕೆಲಸ ಮಾಡಿ... ಬರುವ ವರ್ಷ ನೋಡೋಣ... " ಅಂದ.
ಮೌನವಾಗಿದ್ದೆ.
"ಈ ವರ್ಷದ ನಿಮ್ಮ  ಪರ್ಪಾರ್ಮೆನ್ಸು  ಎವರೇಜ್ ಅಷ್ಟೇ.. ", ದೊಡ್ಡದಾಗಿ ಸರ್ಟಿಫಿಕೇಟ್ ಕೊಟ್ಟ.
ಯಾಕೆ ಏನು ಎಂದು ಪ್ರಶ್ನಿಸುವುದು ವ್ಯರ್ಥ ಅನ್ನಿಸಿತು.
"ಓಕೆ" , ಅಂದುಬಿಟ್ಟು ಹೊರಗೆ ಬಂದೆ.
ಜೀವನವೆಂದರೆ ಇಷ್ಟೇ ಅನ್ನಿಸಿತು.
ಮಾಡಿದ ಕೆಲಸಾನೆ ಮಾಡೋದು, ಅದರಲ್ಲಿ ಇಂಪ್ರೂಮೆಂಟ್ಸ್ ಅಂದರೆ ಏನು ಅಂತ ಅರ್ಥವಾಗಲಿಲ್ಲ.
ಚಾಲೆಂಜು ಇಲ್ಲದ ಕ್ಷೇತ್ರದಲ್ಲಿ ಪರ್ಪಾರ್ಮೆನ್ಸು ಎಂದರೆ ಏನು? ಅದೂ ಅರ್ಥವಾಗಲಿಲ್ಲ.
ಅರ್ಥ ಮಾಡಿಕೊಳ್ಳೋಣ ಅಂತನೂ ಅನ್ನಿಸಲಿಲ್ಲ.

"ಕೆಲಸ ಇನ್ನೂ ಆಗಿಲ್ಲವೇನೂ.. ", ರೂಪಳ ಇಮೇಲ್ ಇತ್ತು.
"ಓ ಹೌದಲ್ಲ.. " ಅಂದುಕೊಂಡು ಬೇಗನೆ ಅವಳ ಕೆಲಸ ಮುಗಿಸುವತ್ತ ಗಮನ ಹರಿಸಿದೆ.
ಮನದ ಮೂಲೆಯಲ್ಲಿ ಎಲ್ಲೋ ಒಂದು ಕಡೆ, "ಚಾಲೆಂಜ್  ಇರೋದು ಬರೀ ಕೆಲಸದಲ್ಲಿ ಅಲ್ಲ. ಅದನ್ನು ಮಾಡೋ ಮನಸ್ಥಿತಿಯಲ್ಲಿ" ಅನ್ನಿಸಿತು !

ಶನಿವಾರ, ಫೆಬ್ರವರಿ 4, 2012

ನೆನಪು


ಸಂಜೆಗತ್ತಲಲ್ಲಿ ಸಮುದ್ರ ಕಿನಾರೆಯಲ್ಲಿ ನಡೆಯವ ಖುಷಿಯೇ ಬೇರೆ. ಸುಂದರ ಸೂರ್ಯ ಕಿರಣಗಳು, ಬೀಸಿ ಬರುವ ಮಂದ ಮಾರುತ, ಸಣ್ಣದಾಗಿ ದಡಕ್ಕೆ ಬಡಿಯುವ ನೀರ ಅಲೆಗಳು, ಅವಸರದಿಂದ ಗೂಡು ಸೇರಲು ಹಾರುತ್ತಿರುವ ಹಕ್ಕಿಗಳು, ದಿನದ ಕೆಲಸ  ಮುಗಿಸಿ ಮನೆಗೆ ಮರಳುವ ಮೀನುಗಾರರು ... ಎಲ್ಲವು ದಿನವೂ ಕಾಣುವ ದೃಶ್ಯಗಳೇ. ಆದರೆ ಪ್ರತಿದಿನವೂ ಅದರಲ್ಲೇನೋ ಹೊಸತನ. ದಿನವೂ ನವೀನವೆಂಬ ಭಾವನೆ. ಅದಕ್ಕೆ ಸಮುದ್ರ ತಟವೆಂದರೆ ನನಗೆ ಅದೇನೋ ಆಕರ್ಷಣೆ , ಮುಗಿಯದ ತುಡಿತ. 

ಕೆಂಪು ಕಿರಣಗಳಿಗೆ ಮೈಯೊಡ್ಡಿ ಕೂತ ಯುವ ಜೋಡಿಯನ್ನು ನೋಡುವುದೇ ಒಂದು ಸೊಗಸು. ಪ್ರಪಂಚವಿಡಿ ತಮ್ಮನ್ನು ನೋಡುತ್ತಿದ್ದರೂ, ತಮ್ಮನ್ನು ಯಾರೂ ಗಮನಿಸುತ್ತಿಲ್ಲವೆಂಬ ಭ್ರಮಲೋಕವನ್ನು ಕಟ್ಟಿ, ಅದರಲ್ಲೇ ಮುಳುಗಿ, ತಮ್ಮದೇ ಸಣ್ಣ ಪ್ರಪಂಚವನ್ನು ಕಟ್ಟಿಕೊಂಡು ಗಗನದಲ್ಲಿ ಹಾರುತ್ತಿರುವ ಮನಸ್ಸು. ತಮ್ಮ ಪ್ರಿಯರ ಕಣ್ಣಲ್ಲಿ ಕನಸುಗಳನ್ನು ಬಿತ್ತಿ, ಅದನ್ನೇ ಬೆಳೆಸಿ, ಅದರಲ್ಲೇ ಸೌಧಗಳನ್ನು ಕಟ್ಟಿ, ತಾವೇ ರಾಜ-ರಾಣಿ ಯರೆಂದು ಮೇರುವ ವಯಸ್ಸು. ಪಿಸು ಮಾತುಗಳನ್ನು ಆಡುತ್ತಾ, ಒಬ್ಬರ ಮುಖವನ್ನು ಇನ್ನೊಬ್ಬರು ದಿಟ್ಟಿಸುವದರಲ್ಲಿ ಅದೇನೋ ಒಂದು ಸಂತಸ. ಅತ್ತಿತ್ತ ನೋಡಿ ಪ್ರಿಯೆಯ ಗಲ್ಲಕ್ಕೊಂದು ಸಣ್ಣ ಮುತ್ತು ಕೊಟ್ಟು, ಜಗತ್ತನ್ನೇ ಗೆದ್ದೆನೆಂದು ಸಂಭ್ರಮಿಸುವ ಯುವಕ. ಜೀವನದುದ್ದಕ್ಕೂ ಮರೆಯಲಾರದ ಸವಿ ಗಳಿಗೆಯಿದು ಎಂದು ನಾಚುತ್ತ ಕೆನ್ನೆ ಕೆಂಪದರೂ ಅದನ್ನು ಪ್ರೀತಿಯಿಂದಲೇ ವಿರೋದಿಸುವ ಯುವತಿ ... ನೋಡಿದವರಿಗೆ ಮನದಾಳದಲ್ಲಿ ಪುಳಕವಾಗದಿರದು.

ಈ ಯುವ ಜೋಡಿಯನ್ನು ನೋಡುತ್ತಾ, ಮನ ವರುಷಗಳಷ್ಟು ಹಿಂದೋಡಿತು. ಜೀವನವೆಂದರೆ ಇಷ್ಟೇ ತಾನೇ ? ಹೊಸದನ್ನೇನೋ ಸಾಧಿಸಬೇಕೆಂಬ ಹಂಬಲ, ಹಳೆಯದನ್ನು ಮತ್ತಷ್ಟು ಕೊರೆಯುವ ಚಪಲ. ಅದು ಬಿಟ್ಟರೆ ಇಂದಿನದ್ದಲ್ಲಿ ನೆನೆಯುವದಕ್ಕೆ ಏನಿರುತ್ತದೆ ವಿಶೇಷ. ಜೀವನದಲ್ಲಿ ಯಾವತ್ತೂ ಮತ್ತೆ ಮತ್ತೆ ನೆನಪಾಗುವ ದಿನಗಳೆಂದರೆ ಬಾಲ್ಯ ಮತ್ತು ಕಾಲೇಜ್ ದಿನಗಳು. ಬಹುಶ: ಯಾವುದೇ ಜವಾಭ್ದಾರಿ ಇಲ್ಲದೆ ಬರಿ ಕನಸು ಮತ್ತು ವರ್ತಮಾನಕ್ಕೆ ಮೀಸಲಾಗಿಡುವ ದಿನಗಳು ಅದು ಮಾತ್ರ. ಕಾಲೇಜ್ ದಿನಗಳಲ್ಲಿ ಪ್ರೀತಿ-ಪ್ರೇಮ ಎಂದು ಸಮಯ ಹಾಳು ಮಾಡದ "ಆದರ್ಶ" ವಿದ್ಯಾರ್ಥಿ ನಾನು. ಬರಿ ಓದು, ಮಾರ್ಕ್ಸ್, ಗುರಿಗಳಿಗೆ ಹೆಚ್ಚು ಒತ್ತು ಕೊಟ್ಟು ನಡೆವ ಬೆರಳೆಣಿಕೆಯ ವಿದ್ಯಾರ್ಥಿಗಳ ಗುಂಪಿಗೆ ಸೇರಿದವ ನಾನು. ಹಾಗಾಗಿ ನನ್ನ ಕನಸುಗಳಲ್ಲಿ, ಭೂತ ಕಾಲಗಳಲ್ಲಿ ಕಾಲೇಜ್ ದಿನಗಳಿಗೆ ಪ್ರಾಶಸ್ತ್ಯ ತುಂಬಾ ಕಮ್ಮಿ. ಅದರ ಬದಲು ನನಗೆ ಮತ್ತೆ ಮತ್ತೆ ನೆನಪಾಗುವುದೆಂದರೆ ನನ್ನ ಪ್ರೀತಿ ಹುಟ್ಟಿದ ದಿನ. ನನ್ನ ಪ್ರೇಮ ಮೊಳಕೆಯೊಡೆದ ದಿನಗಳು.

ಆ ಬ್ರಹ್ಮ ತನ್ನ ಕೆಲಸಕ್ಕಾಗಿ ಗಂಡು-ಹೆಣ್ಣುಗಳನ್ನು ಅದೆಷ್ಟು  ಯೋಜನಬದ್ದವಾಗಿ  ಕೂಡಿಸುತ್ತಾನೆಂದರೆ, ಈವತ್ತು ತಾವೇ ದೊಡ್ಡ ಯೋಜನೆಗಳನ್ನು ಮಾಡುವುದಾಗಿ ಕೊಬ್ಬುವ ಪದವೀದರರೆಲ್ಲ ನಾಚಿ ತಲೆ ತಗ್ಗಿಸಬೇಕು. ದಿನವೂ ನೂರಾರು ಗಂಡು-ಹೆಣ್ಣುಗಳು   ಒಬ್ಬರನ್ನೊಬ್ಬರು ನೋಡುತ್ತಾರೆ, ಮಾತಾಡುತ್ತಾರೆ, ಜೊತೆಗೆ ಕೆಲಸವನ್ನೂ ಮಾಡುತ್ತಾರೆ. ಆದರೆ ಪ್ರೀತಿಯೆಂಬುದು ಹಾಗೆ ಹುಟ್ಟುವುದಿಲ್ಲ. ಅದು ಎಷ್ಟು ಆಪ್ಯಾಯಮಾನವೋ ಅಷ್ಟೇ ಆಕಸ್ಮಿಕವೂ ಹೌದು.

ಸಣ್ಣ ಹುಡುಗನೊಬ್ಬ ಸಮುದ್ರ ತೀರದಲ್ಲಿ ಮರಳ ಮೇಲೆ ಅದೇನೋ ಬರೆಯುತ್ತಿದ್ದ. ಸ್ವಲ್ಪ ಹೊತ್ತಲ್ಲೇ ತೆರೆಯೊಂದು ಅಪ್ಪಳಿಸಿ ಅವನು ಬರೆದದ್ದನ್ನೆಲ್ಲಾ ಅಳಿಸಿ ಹಾಕುತ್ತಿತ್ತು. ಆ ಹುಡುಗ ಮತ್ತೆ ಬರೆಯುತ್ತಿದ್ದ. ತೆರೆ ಮತ್ತೆ ಅಪ್ಪಳಿಸಿ ಅಳಿಸುತ್ತಿತ್ತು. ಇದು ಕೊನೆಯಿಲ್ಲದ ಆಟ. ಆದರೆ ಆ ಹುಡುಗನಿಗೆ ಬೇಜಾರಿಲ್ಲ. ಮತ್ತೆ ಮತ್ತೆ ಮರಳಿ ಯತ್ನವ ಮಾಡುತ್ತಿದ್ದ. ಹೌದು ಈ ಜೀವನದ ಆಟದಲ್ಲೂ ಹೀಗೆಯೇ. ನಮಗೆ ಇಷ್ಟವಾದ ಕೆಲಸವನ್ನು, ನಮಗೆ ಮಜಾ ಕೊಡುವ ಕಾರ್ಯಗಳನ್ನು ನಾವು ಮತ್ತೆ ಮತ್ತೆ ಪ್ರಯತ್ನಿಸಿ ಮಾಡುತ್ತೇವೆ. ಸೋಲು ಬರುವುದೆಂದು ಉಳಿದವರೆಲ್ಲರಿಗೂ ಗೊತ್ತಿದ್ದರೂ ನಮಗದು ಗೊತ್ತಿರುವುದಿಲ್ಲ. ಅಥವಾ ಗೊತ್ತಿದ್ದರೂ ಅದರಿಂದ ಹಿಂದೆ ಸರಿಯಲು ಮನಸ್ಸು ಕೇಳುವುದಿಲ್ಲ... ಆವತ್ತು ಆ ಹುಡುಗಿಯನ್ನು ಕಂಡಾಗಲೂ  ನನಗನ್ನಿಸಿದ್ದು ಹಾಗೆಯೇ. ಆಕೆ ಯಾರೆಂದು ಗೊತ್ತಿರಲಿಲ್ಲ.... ಆಕೆಯ ಹೆಸರು, ಪರಿಚಯ ಏನೂ ಗೊತ್ತಿರಲಿಲ್ಲ. ಆದರೂ ಪ್ರೀತಿಯೆಂಬ ಮಾಯೆ ಅದೇಗೋ ಆಕೆಯ ರೂಪದಲ್ಲಿ ನನ್ನನಾವರಿಸಿಕೊಂಡಿತ್ತು... ಆಕೆ ನನ್ನವಳಾಗಬೇಕು ಎನಿಸಿಬಿಟ್ಟಿತ್ತು...

ಯಾವುದೊ ಊರಲ್ಲಿ ಯಾವುದೊ ಸಮಾರಂಭದಲ್ಲಿ ಆಕೆಯನ್ನು ಕಂಡಿದ್ದು ಅಷ್ಟೇ... ಅದೇಕೋ ಆಕೆ ನನಗಿಷ್ಟವಾಗಿ ಬಿಟ್ಟಳು. ಇದಕ್ಕೇ ಇರಬೇಕು "ಸೆಳೆತ" ಎನ್ನುವುದು.... ಸಮುದ್ರ ನನಗಿಷ್ಟ. ಯಾಕಿಷ್ಟ ಎಂದರೆ ನನ್ನಲ್ಲಿ ಉತ್ತರವಿಲ್ಲ. ಇಷ್ಟ ಎಂದರೆ ಇಷ್ಟ ಅಷ್ಟೇ. ಅದನ್ನು ನಾವಾಗಿ ಹುಟ್ಟಿಸುವದಲ್ಲ, ಅದು ತಾನಾಗಿ ಹುಟ್ಟುವುದು. ಹುಟ್ಟಿದ ಮೇಲೆ ಅದನ್ನು ಬೆಳೆಸುವುದು ನಾವು. ಹಠಗಟ್ಟಿ ಮರಳಿ ಯತ್ನ ಮಾಡುವುದೂ ನಾವು. ಅಷ್ಟೂ ಮಾಡದಿದ್ದರೆ ಅದು ಇಷ್ಟ ಹೇಗಾಗುತ್ತದೆ?

ಜೀವನವೆಂಬುದು ಮಾಯೆ. ಜಗತ್ತೆಂಬುದು ಸಣ್ಣದು. ಅಲ್ಲಿ ಎಲ್ಲರೂ ಮತ್ತೆ ಮತ್ತೆ ಸಿಕ್ಕುತ್ತಾರೆ ಇದೆಲ್ಲಾ ವೇದಾಂತದ ಮಾತಷ್ಟೇ ಎಂದುಕೊಂಡಿದ್ದೆ. ಆದರೆ ಇದು ವಾಸ್ತವ, ಬರಿ ಕತೆಯಲ್ಲ ಎಂದು ಗೊತ್ತಾದ್ದು ಆಕೆ ನನಗೆ ಮತ್ತೆ - ಮತ್ತೆ ಸಿಕ್ಕಾಗ. ಒಂದು ಸಾರಿ ಸಿಕ್ಕವಳು ಮತ್ತೊಂದು ಸಾರಿ ಸಿಕ್ಕರೆ ಆಕಸ್ಮಿಕ ಎನ್ನಬಹುದು. ಆದರೆ ಮನಸನ್ನಾವರಿಸಿದವಳು ಮೂರನೆಯ ಬಾರಿಯು ಸಿಕ್ಕಿಬಿಟ್ಟರೆ... ಹೌದು ಆಗ ನಿಮ್ಮಂತೆ ನನಗೂ ನಂಬುವುದೋ ಬಿಡುವುದೋ ಗೊತ್ತಾಗಲಿಲ್ಲ.

ನೀರವ ರಾತ್ರಿಯಲ್ಲಿ ಬಸ್ಸು ಜೋರಾಗಿ ಹೋಗುತ್ತಿದ್ದರೆ ಮನಸ್ಸು ಅದಕ್ಕಿಂತ ವೇಗವಾಗಿ ಓಡುತ್ತಿತ್ತು... ಮನಸೆಂಬುದು ತುಂಬ ಜಟಿಲವಾದ ತಾಣ. ಅದರಲ್ಲೇನಾದರೂ ಸಿಕ್ಕು ಹಾಕಿಕೊಂಡರೆ ಕಳಚಿಕೊಳ್ಳುವುದು ತುಂಬ ಕಷ್ಟ. ಬಲೆಯಲ್ಲಿ ಬಿದ್ದಂತೆ... ಒದ್ದಾಡಿ ದಷ್ಟೂ ಅದು ಮತ್ತಷ್ಟು ಅಂಟಿಕೊಳ್ಳುತ್ತದೆ. ಒಮ್ಮೆ ಬೇಕು ಅಂದುಕೊಂಡಿದ್ದನ್ನು, ಅದು ಹೇಗಿದ್ದರೂ ಸರಿ, ಹೇಗಾದರೂ ಸರಿ, ಪಡೆಯಲೇಬೇಕೆಂಬುದು ಮನಸ್ಸಿನ ಹಠ. ಅದು ಭಗವಂತ ಕೊಟ್ಟ ವರ ಹಾಗು ಶಾಪ. ಆಕೆ ಬೇಕು ಎಂದು ಮನಸಲ್ಲಿ ಬರೆದಾಗಿತ್ತು. ಆದರೆ ಆಕೆ ಯಾರು ? ಎಲ್ಲಿರುತ್ತಾಳೆ ? ಮನೆಯವರು ಯಾರು ? ಏನು ಗೊತ್ತಿರಲಿಲ್ಲ.... ಬರಿ ಕಣ್ಣೋಟದಲ್ಲಿ ಹುಟ್ಟುವ ಪ್ರೀತಿಗೆ ಎಷ್ಟು ಶಕ್ತಿಯಿರುತ್ತದೆ ಎಂದರೆ ಅದು ಬೇಕೆನಿಸಿದ್ದನ್ನು ಪಡೆಯುವ ದಾರಿಯನ್ನೂ ಬರೆದಿರುತ್ತದೆ.

ಆಕೆಯಿದ್ದ ಊರಿಂದ ತುಂಬಾ ದೂರ ಬಂದಾಗಿತ್ತು. ಆದರೆ ಬಂದಿದ್ದು ದೇಹ ಮಾತ್ರ, ಮನಸಲ್ಲ ಎಂಬುದು ನನ್ನನ್ನು ನೋಡಿದ ಯಾರು ಬೇಕಾದರೂ ಹೇಳುವಂತಿತ್ತು. " ಇರುವುದೆಲ್ಲವ ಬಿಟ್ಟು ಇರದುದರ ಎಡೆಗೆ ತುಡಿವುದೇ ಜೀವನ " . ಆದರೆ ಅದು ತಪ್ಪಲ್ಲ. ಇರುವುದರಲ್ಲೇ ತೃಪ್ತಿದ್ದರೆ ಮನುಷ್ಯ ಯಾಕೆ ಚಂದ್ರಲೋಕ ತನಕ ಹಾರುತ್ತಿದ್ದ  ? ಕನಸುಗಳು, ಕನಸಾಗಿಟ್ಟುಕೊಂಡರೆ ಅದು ಕನಸಾಗಷ್ಟೇ ಉಳಿಯುತ್ತದೆ. ಕನಸಿಗೊಂದು ಸ್ವರೂಪ ಕೊಟ್ಟಾಗ, ಮನಸಲ್ಲಿದ್ದ ಸ್ವರ ಹೊರ ಬಂದಾಗ, ಸಮಯಾಂತರದಲ್ಲಿ ನನಸು ಸಿದ್ದವಗಿರುತ್ತದೆ ಎಂಬುದು ಸುಳ್ಳಲ್ಲ.

ನನ್ನ ಆಕೆಯ ಮೇಲಿನ ಇಷ್ಟ ಎಲ್ಲವನ್ನೂ ಮಾಡಿಸಿತು. ಗೊತ್ತಿಲ್ಲದವಳು ಗೊತ್ತಾಗಿಬಿಟ್ಟಳು. ಹೆಸರಿಲ್ಲದವಳಿಗೆ ಹೆಸರು ಬಂತು. ವಿಳಾಸವಿಲ್ಲದವಳಿಗೆ ವಿಳಾಸ ಬಂತು... ಹೌದು, ನನ್ನ ಕಥೆ ಆಕೆಗೆ ತಲುಪಿ ಬಿಟ್ಟಿತು. ಪ್ರೇಮ ವಿವಾಹ ಕಷ್ಟ ಎಂಬುದು ಎಲ್ಲರಿಗೂ ಸತ್ಯವೇನೂ? ಆದರೆ ನನ್ನ ಪಾಲಿಗೆ ಆ ಮಾತು ಸುಳ್ಳಾಯಿತು. ಆಕೆ ನನ್ನ ಕೈ ಹಿಡಿದು ಮುದ್ದಿನ ಮಡದಿಯಾದಳು. ನನ್ನ ಸರ್ವಸ್ವವನ್ನೂ ಆವರಿಸಿಕೊಂಡು ಬಿಟ್ಟಳು.

ಸೂರ್ಯ ಮುಳುಗಿ, ಕೆಂಪಾಗಿದ್ದ ಆಗಸ ಕಪ್ಪಾಗಿತ್ತು. ಆದರೆ ಮೂಡುತ್ತಿದ್ದ ಚಂದ್ರ ಅದನ್ನು ಮತ್ತೆ ಬೆಳ್ಳಗಾಗಿಸಲು ಪ್ರಯತ್ನಿಸುತ್ತಿದ್ದ. ಜೀವನದ ಹಾಗೆ ಅನ್ನಿಸಿತು. ಪ್ರೀತಿ ಮದ್ಯೆ ಚಿಕ್ಕದಾದ ವಿರಸ ಮೂಡಿದಾಗ ಬಾಳು ಕಪ್ಪಾಗುವುದಿಲ್ಲ. ಮರು ದಿನದವರೆಗೆ ಕಾಯುವುದೂ ಇಲ್ಲ. ಮತ್ತೆ ರಾಜಿಯಾಗುವ ನೆಪಕ್ಕೆ ಕಾಯುತ್ತಿರುತ್ತದೆ ಅಷ್ಟೇ... ಸರಿ, ಮನೆಗೆ ಹೊತ್ತಾಗುತ್ತದೆ ಎಂದು ಮನೆಯ ಕಡೆಗೆ ಜೋರಾಗಿ ಹೆಜ್ಜೆ ಹಾಕತೊಡಗಿದೆ.

- ಈಶ್ವರ ಪ್ರಸಾದ.